ಬಿಎಚ್‌ಇಎಲ್‌ ಬೆಂಗಳೂರು ಕಾರ್ಖಾನೆಗೆ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಐತಿಹಾಸಿಕ ಭೇಟಿ : ಸ್ವಾತಂತ್ರ್ಯ ನಂತರ ಕಾರ್ಖಾನೆಗೆ ಭೇಟಿ ನೀಡಿದ ಮೊದಲ ಉಪ ರಾಷ್ಟ್ರಪತಿ; ಹೆಚ್.ಡಿ.ಕುಮಾರಸ್ವಾಮಿ ಸಂತಸ

ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿ (BHEL) ಶನಿವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.

 

ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಉಪ ರಾಷ್ಟ್ರಪತಿಯೊಬ್ಬರು ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ವಿವಿಧ ವಿಭಾಗಗಳಿಗೆ ತೆರಳಿ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಜತೆ ಸಂವಾದ ನಡೆಸಿದರು.

 

ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಸುದೇಶ್ ಧನಕರ್ ಅವರೊಂದಿಗೆ ಕಾರ್ಖಾನೆಗೆ ಶನಿವಾರ ಭೇಟಿ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳು ಉಪ ರಾಷ್ಟ್ರಪತಿಗಳ ಜತೆಯಲ್ಲಿದ್ದರು.

 

ಕಾರ್ಖಾನೆಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳನ್ನು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಬರಮಾಡಿಕೊಂಡರು.

 

ವಿಕಸಿತ ಭಾರತ್ ಕನಸಿಗೆ ಬಿಹೆಚ್ ಇಎಲ್ ಕೊಡುಗೆ: HDK

 

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಾವು ಸಚಿವರಾಗಿರುವ ಬೃಹತ್ ಕೈಗಾರಿಕೆ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿರುವ ಬಿಹೆಚ್ ಇಎಲ್ ಕಾರ್ಖಾನೆಯ ಬೆಂಗಳೂರು ಘಟಕಕ್ಕೆ ಭೇಟಿ ನೀಡಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಅಡಿಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ. 2047ರ ಹೊತ್ತಿಗೆ ವಿಕಸಿತ ಭಾರತ ಕನಸನ್ನು ನನಸು ಮಾಡುವ ದಿಸೆಯಲ್ಲಿ ಉಪ ರಾಷ್ಟ್ರಪತಿಗಳ ಭೇಟಿ ನಮಗೆಲ್ಲ ಆನೆಬಲ ತಂದು ಕೊಟ್ಟಿದೆ ಎಂದರು.

 

ವಿಕಸಿತ ಭಾರತ ಕನಸು ಸಾಕಾರಕ್ಕಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಬಿಹೆಚ್ ಇಎಲ್ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದ ಸಚಿವರು; ಉಪ ರಾಷ್ಟ್ರಪತಿಗಳ ಭೇಟಿ ಈ ಕಾರ್ಖಾನೆಯ ಹೆಮ್ಮೆಯನ್ನು ಹೆಚ್ಚಿಸಿದೆ. ಅವರ ಭೇಟಿಯ ಸ್ಫೂರ್ತಿಯೊಂದಿಗೆ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.

 

ಭಾರತದ ಕೈಗಾರಿಕೆ ಕ್ಷೇತ್ರವು ಸ್ವಾವಲಂಬನೆ ಸಾಧಿಸುವಲ್ಲಿ ಬಿಎಚ್‌ಇಎಲ್‌ನ ನಿರ್ಣಾಯಕ ಪಾತ್ರ ವಹಿಸಿದೆ ಎಂದ ಅವರು; ಖಾಸಗಿ ವಲಯದ ಪ್ರಬಲ ಪೈಪೋಟಿ ನಡುವೆಯೂ ಕಂಪನಿಯು ಬಲಿಷ್ಠವಾಗಿ ನಿಂತಿದೆ ಮತ್ತು ವೇಗಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಇದಕ್ಕೆ ಉದ್ಯೋಗಿಗಳ ನಿರಂತರ ಪರಿಶ್ರಮ ಕಾರಣ, ಅವರಿಗೆ ನನ್ನ ಧನ್ಯವಾದಗಳು ಎಂದು ಕೇಂದ್ರ ಸಚಿವರು ಹೇಳಿದರು.

 

ಕಾರ್ಯಾದೇಶಗಳ ಮೊತ್ತದ ₹1.7 ಲಕ್ಷ ಕೋಟಿ ದಾಟಿದೆ

ಕಳೆದ ಹಣಕಾಸು ವರ್ಷದಲ್ಲಿ ನಾವು ₹69,000 ಕೋಟಿ ಮೌಲ್ಯದ ಕಾರ್ಯಾದೇಶಗಳನ್ನು ಬಿಎಚ್‌ಇಎಲ್‌ ಪಡೆದುಕೊಂಡಿದೆ. ಈ ವರ್ಷ ನಮ್ಮ ಕಾರ್ಯಾದೇಶಗಳ ಮೊತ್ತದ ₹1.7 ಲಕ್ಷ ಕೋಟಿ ದಾಟಿದೆ. ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವ, ಆತ್ಮನಿರ್ಭರ, ವಿಕಸಿತ ಭಾರತ್ ಗುರಿಯನ್ನು ಸಾಧಿಸುವಲ್ಲಿ ಕಂಪನಿ ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಿಮ್ಮ ಭೇಟಿಯಿಂದ ನಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಕುಮಾರಸ್ವಾಮಿ ಉಪ ರಾಷ್ಟಪತಿಗಳ ಸಮ್ಮುಖದಲ್ಲಿ ಹೇಳಿದರು.

 

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು,ಬಿಎಚ್‌ಇಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಅವರು ಉಪಸ್ಥಿತರಿದ್ದರು.

 

 

Comments

Leave a Reply

Your email address will not be published. Required fields are marked *