ಆರ್‌ಎಲ್‌ಜೆಐಟಿ ಬೆಳ್ಳಿ ಹಬ್ಬ, ಜಾಲಪ್ಪ ಶತಮಾನೋತ್ಸವಕ್ಕೆ ಚಾಲನೆ

ದೊಡ್ಡಬಳ್ಳಾಪುರ :ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಮಹೋತ್ಸವ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಆರ್.ಎಲ್.ಜಾಲಪ್ಪ ಜನ್ಮ ಶತಮಾನೋತ್ಸವ ಹಿನ್ನಲೆ 1 ತಿಂಗಳ ಕಾರ್ಯಕ್ರಮ ಸರಣಿಗೆ ಚಾಲನೆ ನೀಡಲಾಯಿತು.

 

ಶ್ರೀ ದೇವರಾಜ್ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮತ್ತು ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಆರ್‌ಎಲ್‌ಜೆಐಟಿ ಬೆಳ್ಳಿ ಹಬ್ಬ ಮತ್ತು ಜಾಲಪ್ಪ ಶತಮಾನೋತ್ಸವ ಸಮಾರಂಭಗಳ ಲಾಂಛನ ಅನಾವರಣ ಮಾಡಿದರು. ಸಂಸ್ಥೆಯ ಆವರಣದಲ್ಲಿ ಗಣಹೋಮ ನಡೆಯಿತು.

ಅವರು ಮಾತನಾಡಿ, ಅಕ್ಟೋಬರ್‌ 17, 18ರಂದು ಕ್ಯಾಂಪಸ್‌ನ ರಜತ ಮಹೋತ್ಸವ ನಡೆಯಲಿದ್ದು, ಈ ವೇಳೆ ಘಟಿಕೋತ್ಸವ, ಹಳೆಯ ವಿದ್ಯಾರ್ಥಿಗಳ ಸಮಾಗಮ, ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಸಂಜೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್‌ 19ರಂದು ಜಾಲಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

 

ಈ ಹಿನ್ನಲೆಯಲ್ಲಿ 1 ತಿಂಗಳಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲೋತ್ಸವ-2025 ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ 2 ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

 

ಗೌರ್ನಿಂಗ್‌ ಕೌನ್ಸಿಲ್ ಸದಸ್ಯ ಜೆ.ಆರ್.ರಾಕೇಶ್, ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಡೀನ್‌ ಡಾ.ಶ್ರೀನಿವಾಸರೆಡ್ಡಿ, ಕಾರ್ಯಕ್ರಮ ಸಂಯೋಜಕ ಡಾ.ಎನ್.ಬಿ.ಶಂಕರ್, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಲಯನ್ಸ್‌ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ವಿವಿಧ ಶೈಕ್ಷಣಿಕ ಘಟಕಗಳು ಮತ್ತು ವಿಭಾಗಗಳ ಮುಖ್ಯಸ್ಥರು, ಕಾರ್ಯಕ್ರಮ ಆಯೋಜನಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

 

Comments

Leave a Reply

Your email address will not be published. Required fields are marked *