ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಬೃಹತ್ ಮರಗಳನ್ನು ಕಡಿಸಿದ ತಾಲ್ಲೂಕು ಪಂಚಾಯತಿ

ದೊಡ್ಡಬಳ್ಳಾಪುರ : ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸೊಗಸಾಗಿ ಬೆಳದಿದ್ದ ಅಶೋಕ ಮರದ ದಿಮ್ಮಿಗಳನ್ನು ಬಿಟ್ಟು ದೊಡ್ಡ ದೊಡ್ಡ ರೆಂಬೆ-ಕೊಂಬೆಗಳನ್ನೂ ಸೇರಿದಂತೆ ಮರದಲ್ಲಿ ಒಂದು ಎಲೆಯನ್ನು ಬಿಡದೆ ಕಡಿದು ಹಾಕಲಾಗಿದೆ.

ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಯ ಆವರಣದಲ್ಲಿ ಬೃಹತ್ ಮರಗಳನ್ನು ಕಡಿಸಿರುವ ಘಟನೆ ನಡೆದಿದೆ ಎರಡನೇ ಶನಿವಾರದ ರಜಾ ದಿನವಾದ ನಿನ್ನೆ ಮರಗಳನ್ನು ಕಡಿದಿದ್ದು ಇಂದು ಬೆಳಿಗ್ಗೆ ಕಡಿದ ಮರಗಳನ್ನು ಟ್ರಾಕ್ಟರ್‌ಗೆ ತುಂಬಿ ಸಾಗಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿ ಮುನಿರಾಜು ಅವರ, ಕೆಂಪು ಇರುವೆಗಳ ಕಾಟ ಹೆಚ್ಚಾಗಿತ್ತು, ಬೃಹತ್ತಾಗಿ ಬೆಳೆದು ನಿಂತಿದ್ದ ಮರಗಳು ಪಕ್ಕದಲ್ಲಿನ ಕಟ್ಟಡಕ್ಕೂ ತೊಂದರೆ ಉಂಟು ಮಾಡುತ್ತಿದ್ದವು, ಇರುವೆಗಳಿಂದ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿತ್ತು, ಹಾಗಾಗಿ ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ. ಅದು ಮತ್ತೆ ಬೆಳೆಯುತ್ತದೆ ಎಂದರು.

ಇನ್ನೂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ ಬೇಸಿಗೆ ಕಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮರಗಳ ಮಾರಣ ಹೋಮ ಮಾಡುವುದು ತರವಲ್ಲ, ಮರ ಕಡಿಯಲು ಅರಣ್ಯ ಇಲಾಖೆ ವತಿಯಿಂದ ಒಪ್ಪಿಗೆ ಪಡೆದಿದ್ದಾರಾ.. ಏನೊ ಗೊತ್ತಿಲ್ಲ. ಹಾಗೆ ನೋಡಿದರೆ ಇರುವೆ ಕಾಟಕ್ಕೆ ನಗರದಲ್ಲಿರುವ ಉದ್ಯಾನವನಗಳ ಮರಗಳನ್ನೂ ಕಡಿಯಬೇಕಾಗುತ್ತೆ, ಇರುವೆಗಳನ್ನು ತಡೆಗಟ್ಟಲು ಬೇರೆ ಮಾರ್ಗ ಇದೆ. ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಿದ್ದ ಸರ್ಕಾರಿ ಅಧಿಕಾರಿಗಳು ಈ ರೀತಿ ಪರಿಸರ ನಾಶ ಮಾಡಲು ಮುಂದಾಗಿರುವುದು ಅಕ್ಷಮ್ಯ ಎಂದರು.

 

ಇರುವೆ ಕಾಟ ಎಂದು ತಾಲ್ಲೂಕು ಪಂಚಾಯತಿ ಆವರಣದಲ್ಲಿ ಮರಗಳನ್ನು ಕಟಾವು ಮಾಡಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *