ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ :ನಗರದ ತೇರಿನ ಬೀದಿ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಭವ್ಯವಾದ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಪೂರ್ಣವಾಗದೆ ಅರ್ಧಕ್ಕೆ ನಿಂತಿದ್ದು. ತಾಲ್ಲೂಕಿನ ನಾಯಕ ಸಮುದಾಯ ಸೇರಿದಂತೆ ಬಡ ಜನರಿಗೆ ಯಾವುದೇ ಶುಭ ಸಮಾರಂಭಗಳನ್ನು ನಡೆಸಲು ಜಾಗದ ಕೊರತೆ ಉಂಟಾಗಿದೆ.

 

ಹೌದು ನಾಯಕ ಸಮಾಜದ ಆಶಯದಂತೆ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನು ಮತ್ತು ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಟ್ಟಡಕ್ಕೆ ಮೂರು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಇದೀಗ ಕಟ್ಟಡದ ಅಂತ್ಯದಲ್ಲಿ ಪ್ಲಾಸ್ಟಿಂಗ್, ಸುಣ್ಣಬಣ್ಣ, ಟೈಲ್ಸ್ ಕೆಲಸ ಮಾಡಲು ಹಣವಿಲ್ಲದೆ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ

ಒಂದು ಎಕರೆ ಜಮೀನು, ಒಂದೂವರೆ ಕೋಟಿ ಅನುದಾನ:

ನಾಯಕ ಸಮಾಜದ ಆರಾಧ್ಯ ಗುರು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ಮಾಜಿ ಶಾಸಕರ ಅವಧಿಯಲ್ಲಿ ನಗರದ ತೇರಿನ ಬೀದಿ ವೃತ್ತದ ಬಳಿ ತಾಲ್ಲೂಕು ಆಡಳಿತದಿಂದ ಒಂದು ಎಕರೆ ಜಮೀನು ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಗುದ್ದಲಿಪೂಜೆ ನೆರೆವೇರಿಸಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆರಂಭದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸಮುದಾಯ ಭವನ ಆದಷ್ಟು ಬೇಗನೆ ಪೂರ್ಣಗೊಂಡು ಲೋಕಾರ್ಪಣೆ ಯಾಗುತ್ತದೆ ಎನ್ನುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಆದರೆ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತು ಕಳೆದ ಮೂರು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ.

 

 

ಈಗ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಇರುವ ಪರಿಣಾಮವಾಗಿ ಕಟ್ಟಡ ತನ್ನ ಅಸ್ತಿತ್ವ ಕಳೆದುಕೊಳ್ಳುವತ್ತ ಸಾಗಿದೆ. ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭವನದ ಸುತ್ತಲೂ ನಾನಾ ಗಿಡಗಂಟಿಗಳು ಬೆಳೆದು ನಿಂತು ಹಾವು ಚೇಳುಗಳ ಆವಾಸಸ್ಥಾನವಾಗಿದೆ. ಅಲ್ಲದೆ ಪುಂಡ ಪೋಕರಿಗಳಿಗೆ, ಮದ್ಯಪಾನ ಮಾಡಲು ಅಕ್ರಮ ಚಟುವಟಿಕೆ, ಮಲ ಮೂತ್ರ ವಿಸರ್ಜನೆ ಮಾಡುವ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

 

ಕಾಮಗಾರಿ ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು – ಶಾಸಕ ಧೀರಜ್ ಮುನಿರಾಜು

ಶಾಸಕ ಧೀರಜ್ ಮುನಿರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಲ್ಮೀಕ ಭವನ ವೀಕ್ಷಿಸಿ ಅಧಿಕಾರಿಗಳ ಕಾರ್ಯವೈಖರಿಗೆ ಚಾಟಿ ಬೀಸಿದ್ದಾರೆ. ಭವನಕ್ಕೆ ಸುರಕ್ಷತೆ ಇಲ್ಲದೆ ಪುಂಡಪೋಕರಿಗಳ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿರುವುದನ್ನ ಕಂಡು ಗುತ್ತಿಗೆದಾರ ನಿರ್ಮಿತಿ ಕೇಂದ್ರದವರಿಗೆ ಕ್ಲಾಸ್ ತೆಗೆದುಕೊಂಡು, ಗಿಡಗಂಟಿ ತೆರವು, ಕಟ್ಟಡ ಸಂಪೂರ್ಣ ಸ್ವಚ್ಚಗೊಳಿಸಿ ರಸ್ತೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪರಿಶಿಷ್ಟ ವರ್ಗದವರಿಗೆ ಸಿಗುವ ರೂ. 24 ಲಕ್ಷವನ್ನು ವಾಲ್ಮೀಕಿ ಭವನಕ್ಕೆ ನೀಡಲಾಗುವುದು. ನಗರಸಭೆಯಿಂದಲೂ ಅನುದಾನ ಒದಗಿಸಲು ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರಿಗೆ ತಿಳಿಸಿದ್ದೇನೆ. ಕಟ್ಟಡದ ಸುರಕ್ಷತೆ, ಸ್ವಚ್ಚತೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಮತ್ತೊಮ್ಮೆ ಪೂಜೆ ಮಾಡಿ ಕಾಮಗಾರಿ ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.

 

 

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಉಮಾಪತಿ ಮಾತನಾಡಿ ಈ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಅದಷ್ಟು ಶೀಘ್ರವಾಗಿ ಕಟ್ಟಡ ಪೂರ್ಣಗೊಳಿಸಲು ಕ್ರಮ ಜರುಗಿಸಲಾಗುವುದು.

 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಸದಸ್ಯರಾದ ಪದ್ಮನಾಭ, ಬಂತಿ ವೆಂಕಟೇಶ್,ಶಿವು, ಪೌರಾಯುಕ್ತ ಕಾರ್ತಿಕೇಶ್ವರ್, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಉಮಾಪತಿ ಇದ್ದರು.

Comments

Leave a Reply

Your email address will not be published. Required fields are marked *