Blog

  • *ಬೆ.ವಿ.ಕಂ ಕುಂದು ಕೊರತೆ ಸಭೆ : ಶಾಸಕರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರದ ಭರವಸೆ*

    ದೊಡ್ಡಬಳ್ಳಾಪುರ ಆಗಸ್ಟ್ 21(ವಿಜಯಮಿತ್ರ ) : ವಿನೂತನ ಯೋಜನೆಗಳನ್ನು ರೂಪಿಸುವ ಮೂಲಕ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಸ್ಕಾಂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಬೇಕಾಗುವ ಅನುಕೂಲಕರ ವಾತಾವರಣವನ್ನು ಕಲ್ಪಿಸಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

    ನಗರ ಭಾಗದ ಬೆಸ್ಕಾಂ ಕಚೇರಿ ಮುಂಭಾಗ ಆಯೋಜನೆ ಮಾಡಲಾಗಿದ್ದ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ತಾಲೂಕಿನಲ್ಲಿ ಕೇವಲ ಗ್ರಾಮಾಂತರವಷ್ಟೇ ಅಲ್ಲದೇ ನಗರ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು . ನೇಕಾರಿಕೆ ಉದ್ಯಮ ನಗರ ಭಾಗದಲ್ಲಿ ಪ್ರಮುಖವಾಗಿದ್ದು. ವಿದ್ಯುತ್ ವ್ಯತ್ಯಾಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ . ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಶೀಘ್ರಗತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಸಹಕಾರ ಕಲ್ಪಿಸುವ ಮೂಲಕ ತಾಲೂಕಿನ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

     

    ತಾಲ್ಲೂಕಿನ ಹಲವಡೆ ಒಂದಿಷ್ಟು ಸಮಸ್ಯೆ 

    ರಾಜೀವ್ ಗಾಂಧಿ ಬಡಾವಣೆಗಳಲ್ಲಿ ಸಾರ್ವಜನಿಕರು ಎಫ್ 15 ಲೈನ್ ನಿಂದ ಎಫ್ 10ಗೆ ಬದಲಿಸುವಂತೆ ಮನವಿ ಮಾಡಿದರು. ಶ್ರೀ ರಾಮನಹಳ್ಳಿ ಗ್ರಾಮದಲ್ಲಿ 13 ಬೋರಿಗೆ ಒಂದೇ ಟ್ರಾನ್ಸ್ಫಾರ್ಮರ್ ಇದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ರವಿಕುಮಾರ್ ಮನವಿ ಮಾಡಿದರು .

    ನಗರದ ಶಾಂತಿನಗರದಲ್ಲಿ ಸದಾ ಸಿಂಗಲ್ ಫೇಸ್ ಸಮಸ್ಯೆ ಎದುರಗುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದರು. ಟ್ರಾನ್ಸ್ಫಾರ್ಮರ್ ಗಳಿಂದ ಅಗತ್ಯಕ್ಕಿಂತ ಹೆಚ್ಚು ಕನೆಕ್ಷನ್ ನೀಡುತ್ತಿರುವ ಕಾರಣ ವೋಲ್ಟೇಜ್ ಸಮಸ್ಯೆಯಾಗುತ್ತಿದ್ದು. ಈ ಸಮಸ್ಯೆಯಿಂದಾಗಿ ನೇಕಾರಿಗೆ ಉದ್ಯಮ ಸಂಪೂರ್ಣ ನೆಲಕಚ್ಚುತ್ತಿದೆ ನೂತನ ಟ್ರಾನ್ಸ್ಫಾರ್ಮರ್ ಗಳ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.

     

    ನಗರದಲ್ಲಿ 15 ಅಡಿ ಅಥವಾ ಅದಕ್ಕಿಂತಲೂ ಚಿಕ್ಕ ರಸ್ತೆಗಳ ಕಾರಣ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಲು ಸೂಕ್ತ ಸ್ಥಳದ ಕೊರತೆ ಎದುರಾಗಿದ್ದು . ಸಾರ್ವಜನಿಕರು ತಮ್ಮ ಮನೆಗಳ ಮುಂಭಾಗ ಟ್ರಾನ್ಸ್ಫಾರ್ಮರ್ ಅಳವಡಿಕೆ ಮಾಡಲು ಒಪ್ಪುವುದಿಲ್ಲ. ಸಾರ್ವಜನಿಕರು ಸೂಕ್ತ ಸ್ಥಳವನ್ನು ಗುರುತಿಸಿ ನೀಡುವ ಮೂಲಕ ಬೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಬೇಕಾಗಿ ಬೆಸ್ಕಾಂ ಸಿಬ್ಬಂದಿ ವಿನಂತಿಸಿದರು.

     

    ಸಭೆಯಲ್ಲಿ ನಗರಸಭಾ ಸದಸ್ಯರಾದ ಪದ್ಮರಾಜ್, ಹಂಸಪ್ರಿಯ, ಬಂತಿ ವೆಂಕಟೇಶ್, ರಮೇಶ್  ಸೇರಿದಂತೆ ಬೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • *ರಾಜ್ಯಪಾಲರನ್ನು ನಿಂದಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ದೊಡ್ಡಬಳ್ಳಾಪುರ ನಗರ ಮೋರ್ಚಾ ವತಿಯಿಂದ ಪ್ರತಿಭಟನೆ*

    ದೊಡ್ಡಬಳ್ಳಾಪುರ ಆಗಸ್ಟ್ 20 (ವಿಜಯಮಿತ್ರ) : ಮಂಗಳೂರಿನಲ್ಲಿ ಮಾನ್ಯ ಘನತೆವೆತ್ತ ರಾಜ್ಯಪಾಲರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ ರವರು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸುವ ಮೂಲಕ ಕರ್ನಾಟಕದ ಗೌರವವನ್ನು ಹರಾಜು ಹಾಕಿದ್ದಾರೆ. ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರನ್ನು ಕುರಿತು ಈ ರೀತಿಯ ಅವಹೇಳನಕಾರಿ ಹೇಳಿಕೆ ಸಲ್ಲದು ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

    ನಗರದ ತಾಲೂಕು ಕಚೇರಿ ವೃತ್ತದಲ್ಲಿ ಭ್ರಷ್ಟರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಹಗರಣವನ್ನು ಮುಚ್ಚಿಹಾಕುವ ಕುತಂತ್ರಗಳು ನಡೆಯುತ್ತಿವೆ . ರಾಜ್ಯಪಾಲರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಅವರನ್ನು ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಧಾನಸಭಾ ಸದಸ್ಯ ಐವಾನ್ ಡಿಸೋಜರನ್ನು ಕೂಡಲೇ ಬಂಧಿಸಬೇಕು.ಬಿಜೆಪಿ ಪಕ್ಷ ರಾಜ್ಯದ ಜನರ ಪರವಾಗಿ ಧ್ವನಿಯೆತ್ತಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

    ರಾಜ್ಯಪಾಲರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ ರವರು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದು ಈ ಕುರಿತಂತೆ ದೊಡ್ಡಬಳ್ಳಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬಂತಿ, ನಗರ ಬಿಜೆಪಿ ಅಧ್ಯಕ್ಷ ಮುದ್ದಪ್ಪ, ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಆರ್.ಗೋಪಿ, ನಗರಾಡಳಿತ ಪ್ರಕೋಷ್ಟ ಜಿಲ್ಲಾ ಸಂಚಾಲಕ ಕೆ.ಹೆಚ್.ವೆಂಕಟರಾಜು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಜೆ.ಮಂಜುನಾಥ್,ನಗರ ಪ್ರಧಾನ ಕಾರ್ಯದರ್ಶಿ ಗಳಾದ ಎನ್.ಕೆ.ರಮೇಶ್, ತಿರುಮಲ ಮಂಜು, ಯುವ ಮೋರ್ಚಾದ ಅನಿಲ್, ಅಜೇಯ,ಫಣೀಶ್ , ವಿರಾಟ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕವಿತಾ ಮತ್ತು ಮುಖಂಡರಾದ ಬಿ.ಜಿ.ಶ್ರೀನಿವಾಸ,ಮಧು ಬೇಗಲಿ, ನರೇಂದ್ರ ಹಾಗೂ ಬಿ.ಜಿ.ಪಿ ಓ.ಬಿ.ಸಿ.ಮೋರ್ಚಾ,ಮಹಿಳಾ ಮೋರ್ಚಾ , ಎಸ್.ಸಿ.ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

  • *ಜಿಲ್ಲಾಡಳಿತ ಭವನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಸರಳ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 20, 2024(ವಿಜಯ ಮಿತ್ರ ):- ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿಂದು ಸರಳವಾಗಿ ಆಚರಿಸಲಾಯಿತು‌.

     

    ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಬ್ರಹ್ಮಶ್ರೀ ನಾರಾಯಣಗುರು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು.

     

    ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *ಸಿ.ಸಿ.ಟಿ.ವಿ ಅಳವಡಿಕೆ ಮತ್ತು ರಿಪೇರಿ ಉಚಿತ ತರಬೇತಿಗೆ ಆಸಕ್ತರು ಅರ್ಜಿ ಸಲ್ಲಿಸಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 20, 2024(ವಿಜಯ ಮಿತ್ರ ): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 30 ದಿನಗಳ ಸಿ.ಸಿ.ಟಿ.ವಿ ಅಳವಡಿಕೆ ಮತ್ತು ರಿಪೇರಿ ಉಚಿತ ತರಬೇತಿಯು 18 ಅಕ್ಟೋಬರ್ 2024 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸುವ ಆಸಕ್ತ 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾರ್‌ ಕಾರ್ಡ್‌ ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

    ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. 

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ 8884554510, 9241482541, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆ ನಿರ್ದೇಶಕರಾದ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದ ದೇವರಾಜ ಅರಸು ರವರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್ 20, 2024 (ವಿಜಯಮಿತ್ರ):- ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಶೋಷಿತರ, ಬಡವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕರು, ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಟೌನ್ ನಲ್ಲಿರುವ ಡಿ‌.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರವರ 109ನೇ ಜನ್ಮದಿನಾಚರಣೆ ಅಂಗವಾಗಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ದೇವರಾಜ ಅರಸು ಅವರು ಭೂ ಸುಧಾರಣೆ ಮತ್ತು ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತಂದು, ಶ್ರೀಮಂತರು ಹಾಗೂ ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಿದರು. ಬಡವರಿಗೆ ಲಕ್ಷಾಂತರ ಎಕರೆ ಉಳುಮೆ ಭೂಮಿ ನೀಡುವ ಮೂಲಕ ಬಡವರ ಧ್ವನಿಯಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಜಾರಿಗೆ ತಂದು ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದರು ಎಂದರು.

     

    ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ಅರಸು ಅವರ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆಗಳು, ನಿರ್ಮಾಣ ಹಂತದ ಕಟ್ಟಡಗಳ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು‌.

     

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಮಾತನಾಡಿ ದೇವರಾಜ ಅರಸು ಅವರು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ವಾದನಂತರ ಮೊದಲ ಮುಖ್ಯಮಂತ್ರಿ ಆಗಿ, ರಾಜ್ಯದಲ್ಲಿ ಕ್ರಾಂತಿಕಾರಕ ಸಾಮಾಜಿಕ ಸುಧಾರಣೆ ತಂದವರು. ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹನೀಯರು. ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಲು ಒತ್ತು ನೀಡಿದರು. ವಿಶೇಷ ಮೀಸಲಾತಿ, ವಿಶ್ವವಿದ್ಯಾನಿಲಯಗಳ ನಿರ್ಮಾಣ ಸೇರಿದಂತೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಲವು ಯೋಜನೆಗಳನ್ನು ಜಾರಿಗೆ ತಂದರು. ಇಂದಿನ ಪೀಳಿಗೆಯು ಅರಸು ಅವರ ಆದರ್ಶ ಜೀವನವನ್ನು ರೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮುನ್ನಡೆಯಬೇಕು ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಲಾಯಿತು.

     

     

    ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಿರುಪಮಾ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು,ಸ್ಥಳೀಯ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳವಾರ ಬ್ರಹ್ಮಶ್ರೀ ನಾರಾಯಣಗುರು, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆ*

    ದೊಡ್ಡಬಳ್ಳಾಪುರ ಆಗಸ್ಟ್ 20( ವಿಹಾಯಮಿತ್ರ) : ತಾಲ್ಲೂಕಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರು, ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸ್‌ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆಯನ್ನು ಆರ್.ಎಲ್.ಜೆ.ಐ.ಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

     

    ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೂವರು ಮಹನೀಯರು ತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ದತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ. ಹಿಂದುಳಿದ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶಗಳು ಪಾಲನೀಯ ಎಂದರು.

     

     

    ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್‌, ಹುಟ್ಟಿನ ಜಾತಿಯ ಕಾರಣಕ್ಕೆ ವ್ಯಕ್ತಿ ಶ್ರೇಷ್ಠ ಅಥವಾ ಕನಿಷ್ಠವಾಗುವುದಿಲ್ಲ, ಆ ರೀತಿ ಭಾವಿಸಿದರೆ ಅದು ಧರ್ಮ ವಿರೋಧಿಯಾಗುತ್ತದೆ. ಅಸ್ಪೃಶ್ಯತೆ ಎಂಬ ರೋಗ ಮಾನವ ಸೃಷ್ಟಿ. ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ತಮ್ಮದೇ ಆದ ಆಲೋಚನಾಕ್ರಮದ ಮೂಲಕ ನಾರಾಯಣಗುರುಗಳು ಪ್ರತಿಪಾದಿಸಿದರು. ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳಿಂದ ಶ್ರೇಷ್ಠತೆಯನ್ನು ಸಾಧಿಸಬಹುದೆಂದು ತಿಳಿಸಿದ ಅವರು ಸಮಾನತೆಯ ಸಮಸಮಾಜ ಕಟ್ಟಲು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು.

    ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಬಲ ಅಸ್ತಿತ್ವವನ್ನು ಪ್ರತಿಪಾದಿಸಿದ ಕೀರ್ತಿ ದೇವರಾಜ ಅರಸ್‌ ಅವರಿಗೆ ಸಲ್ಲುತ್ತದೆ. ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅರಸು ಅವರದು ಎಂದು ಅಭಿಪ್ರಾಯಪಟ್ಟರು.

     

     

    ಯುವಜನರ ಶಕ್ತಿಯಾಗಿದ್ದ ರಾಜೀವ್‌ಗಾಂಧಿ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯನ್ನು ಜಾರಿಗೆ ತರುವ ಸಾಹಸ ಮಾಡಿದವರು. ಆರಂಭಿಕ ಕಾಲಘಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು. ಅವರ ಜನ್ಮದಿನದ ಸಂದರ್ಭದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

     

    ಇದೇ ವೇಳೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

     

     

    ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ ನಾಗಸಂದ್ರ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜ್, ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಪ್ರೊ.ನರಸಿಂಹರೆಡ್ಡಿ, ಐಟಿಐ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಹಂತೇಶಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಎಸ್‌ಡಿಯುಐಎಂ ಆಡಳಿತಾಧಿಕಾರಿ ಐ.ಎಂ.ರಮೇಶ್‌ಕುಮಾರ್, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡರು.

  • *ರಾಜ್ಯ ಸರ್ಕಾರದ ನಿರ್ಧಾರ ಕನ್ನಡಿಗರ ಹೆಮ್ಮೆಯನ್ನು ದುಪ್ಪಟ್ಟು ಮಾಡಿದೆ – ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ*

    ದೊಡ್ಡಬಳ್ಳಾಪುರ (ವಿಜಯಮಿತ್ರ) : ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಘಟಕ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ

     

    ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿ ಆದೇಶ ಹೊರಡಿಸಿದೆ ಈ ತೀರ್ಮಾನ ಕನ್ನಡಿಗರ ಹೆಮ್ಮೆಯನ್ನು ದುಪ್ಪಟ್ಟು ಮಾಡಿದೆ ಇದನ್ನು ಕರವೇ (ನಾರಾಯಣ ಗೌಡರ ಬಣ ) ಸ್ವಾಗತಿಸುತ್ತದೆ ಎಂದರು.

     

    ಕನ್ನಡಿಗರ ಸ್ವಾಭಿಮಾನವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ತೀರ್ಮಾನಕ್ಕೆ ರಾಜ್ಯ ಸರ್ಕಾರಕ್ಕೆ ಕರವೇ ಅಭಿನಂದನೆ ಸಲ್ಲಿಸುತ್ತದೆ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

  • *ಔಷಧಿಗಳನ್ನು ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುವಂತಿಲ್ಲ – ಏನ್ ಸಿ ಪಟಾಲಯ್ಯ*

    ದೊಡ್ಡಬಳ್ಳಾಪುರ ಆಗಸ್ಟ್ 18(ವಿಜಯಮಿತ್ರ) : ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು. ಯಾವುದೇ ಕಾರಣಕ್ಕೂ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿಗಳನ್ನು ನೀಡಬಾರದೆಂದು ದೊಡ್ಡಬಳ್ಳಾಪುರ ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಏನ್ ಸಿ ಪಟಾಲಯ್ಯ ತಿಳಿಸಿದರು.

    ನಗರದ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಔಷಧಿ ವ್ಯಾಪಾರಿಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸುತಿದ್ದೇವೆ, ಆದರೆ ಏನ್ ಡಿ ಪಿ ಎಸ್ ,ಅಮಲುಜಾರಿತ ಔಷಧಿಗಳು, ಎಂ ಟಿ ಪಿಲ್ ಯಾವುದೇ ಕಾರಣಕ್ಕೂ ನೀಡುವುದಿಲ್ಲ, ಅಂತೆಯೇ ಆಂಟಿಬಯೋಟಿಕ್ ಔಷಧಿಗಳನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿಗಳು ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು , ಈ ಕುರಿತಂತೆ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರಿಗೆ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ತಾಲೂಕಿನ ಯಾವುದೇ ಔಷಧಿ ಮಳಿಗೆಯ ಮಾಲೀಕರು ಸೂಕ್ತ ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ವಿತರಣೆ ಮಾಡುವಂತಿಲ್ಲ , ವೈದ್ಯರ ಸಲಹೆ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಿದ ಪ್ರಕರಣಗಳಲ್ಲಿ ಅಂಗಡಿ ಮಾಲೀಕರೇ ನೇರಹೊಣೆಯಾಗಿರುತ್ತಾರೆ. ಅಂತಹ ಪ್ರಕರಣಗಳಿಗೆ ನಮ್ಮ ಸಂಘವು ಬೆಂಬಲ ನೀಡುವುದಿಲ್ಲ ಎಂದರು .

     

    ಔಷಧಿಗಳ ವಿತರಣೆ ಕುರಿತಂತೆ ಪ್ರತಿ ಮಾಸಿಕವಾಗಿ ಸಭೆ ನಡೆಸಿ ಔಷಧಿ ಮಳಿಗೆಗಳ ಮಾಲೀಕರಿಗೆ ಸಂಘದ ವತಿಯಿಂದ ತಿಳುವಳಿಕೆ ನೀಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶವಿಲ್ಲ ಎಂದರು.

     

    ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮಾತನಾಡಿ ನಮ್ಮ ತಾಲೂಕಿನಲ್ಲಿ ಯಾವುದೇ ಔಷಧಿ ಬಳಕೆಗಳಲ್ಲಿ ವೈದ್ಯರ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಲಾಗುತ್ತಿಲ್ಲ, ಔಷಧಿ ಮಳಿಗೆ ಮಾಲೀಕರು ಎಚ್ಚರ ತಪ್ಪಿದಲ್ಲಿ ಅನಾಹುತ ಖಂಡಿತ, ಏನ್ ಡಿ ಪಿ ಎಲ್,ಅಮಲುಜಾರಿತ ಔಷಧಿಗಳು, ಎಂ ಟಿ ಪಿಎಲ್, ಆಂಟಿಬಯೋಟಿಕ್ ಗಳ ಕುರಿತಂತೆ ಎಚ್ಚರಿಕೆ ಅತ್ಯವಶ್ಯಕ , ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಔಷಧಿ ವಿತರಣೆ ಸಲ್ಲದು, ನಮ್ಮ ತಾಲೂಕಿನಲ್ಲಿ ಅಮಲುಜಾರಿತ ಔಷಧಿಗಳ ವಿತರಣೆ ಮಾಡದ ಕಾರಣ ಕೆಲವು ಮಾದಕವ್ಯಾಸನಿಗಳು(ಯುವಕರು) ಬೇರೆ ತಾಲೂಕಿನಿಂದ ಔಷಧಿ ಪಡೆಯುತ್ತಿದ್ದಾರೆ ಅಲ್ಲಿಯೂ ಸಹ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿ ವಿತರಣೆ ಮಾಡಬಾರದು ಎಂದು ಈಗಾಗಲೇ ತಿಳಿಸಿದ್ದೇವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ ಎಲ್ ಉಮೇಶ್, ಅಧ್ಯಕ್ಷರದ ಬಿಎಸ್ ಶಿವಶಂಕರ್, ಕಾರ್ಯದರ್ಶಿ ಟಿಡಿ ಶಾಮ್ ಸುಂದರ್, ಖಜಾಂಚಿ ರಹಿಮ್ ಖಾನ್, ನಿರ್ದೇಶಕರಾದ ಹೇಮಂತ್ ಕುಮಾರ್, ಚಂದ್ರಣ್ಣ, ಡಿಸಿ ಶಶಿಧರ್,ಸುರೇಶ್, ಜಗನ್ನಾಥ್,ರಜನೀಶ್, ಪ್ರಕಾಶ್,ಮುರುಳಿ ಅಭಿಜಿತ್ ಸೇರಿದಂತೆ ತಾಲೂಕು ಔಷದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ : ಜಿಲ್ಲೆಗೆ ಸೂಕ್ತ ಸಂಚಾಲಕರನ್ನು ನೇಮಿಸಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಮಿತಿಗೆ ಮನವಿ*

    ದೊಡ್ಡಬಳ್ಳಾಪುರ ಆಗಸ್ಟ್ 18 ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿದ್ದು . ಪ್ರತಿ ತಾಲೂಕಿನಲ್ಲೂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಚಾಲಕರು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ ರಾಜ್ಯ ಸಮಿತಿ ತೀರ್ಮಾನಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಂಗಮಿ ಜಿಲ್ಲಾ ಸಂಚಾಲಕರು ತಮ್ಮ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸದ ಕಾರಣ ಸೂಕ್ತ ವ್ಯಕ್ತಿಯನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಬೇಕೆಂದು ದೊಡ್ಡಬಳ್ಳಾಪುರ ತಾಲ್ಲೂಕು ಸಂಚಾಲಕ ರಾಮಮೂರ್ತಿ (ರಾಮು) ನೆರಳಘಟ್ಟ ತಿಳಿಸಿದರು.

    ಆಗಸ್ಟ್ 18ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲೂಕು ಸಂಚಾಲಕ ರಾಮಮೂರ್ತಿ (ರಾಮು)ನೆರಳಘಟ್ಟ ರವರ ನೇತೃತ್ವದಲ್ಲಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕುಗಳ ಸರ್ವ ಸದಸ್ಯರ ತುರ್ತು ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಸಮಿತಿಯ ಬೆಂಗಳೂರು ಗ್ರಾಮಾಂತರ ಹಂಗಾಮಿ ಜಿಲ್ಲಾ ಸಂಚಾಲಕರ ಬದಲಾವಣೆ ಕುರಿತು ಚರ್ಚಿಸಲಾಯಿತು.

    ಸಭೆಯ ನಂತರ ಮಾತನಾಡಿದ ಅವರು ಜಿಲ್ಲೆಯಾದ್ಯಂತ ದಲಿತರ ಮೇಲೆ ದೌರ್ಜನಗಳು, ದಲಿತರ ಭೂಮಿಯನ್ನು ಕುಸಿತುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದೂ ದಲಿತರ ಶಕ್ತಿಯಾಗಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸದಾ ಹೋರಾಟ ನಡೆಸುತ್ತಿದೆ . ಪ್ರತಿ ತಾಲೂಕಿನಲ್ಲೂ ನಮ್ಮ ಸಂಘಟನೆ ಬೆಳೆಯುತ್ತಿದ್ದು . ಇಂತಹ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದವರು ತಾಲೂಕಿನಲ್ಲಿ ಕಾರ್ಯಕರ್ತರ ಬೆಳವಣಿಗೆಗೆ ಸಹಾಯ ಮಾಡಿಕೊಡಬೇಕಿದೆ ಹಾಗೂ ಸಂಘಟನೆ ಬಲಪಡಿಸುವ ರೀತಿಯಲ್ಲಿ ಶ್ರಮಿಸಬೇಕಿದೆ. ಪ್ರಸ್ತುತ ಹಂಗಾಮಿ ಜಿಲ್ಲಾ ಸಂಚಾಲಕ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಸರ್ವ ಸದಸ್ಯರು ಒಮ್ಮತದಿಂದ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸುವ ಮೂಲಕ ಹಂಗಾಮಿ ಜಿಲ್ಲಾ ಸಂಚಾಲಕರ ಬದಲಾವಣೆ ಮಾಡಬೇಕೆಂದು ಕೋರಿ ರಾಜ್ಯ ಸಮಿತಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

    ಹಂಗಾಮಿ ಜಿಲ್ಲಾ ಸಂಚಾಲಕರು ನಮ್ಮ ಹಿರಿಯರು ಹಾಗೂ ದಲಿತ ಹೋರಾಟಗಾರರು ಅವರ ಕುರಿತು ನಮಗೆ ಹೆಮ್ಮೆ ಇದೆ ಆದರೆ ಜಿಲ್ಲೆಯಲ್ಲಿ ಸದಾ ಚೈತನ್ಯ ಹೊಂದಿರುವ ಕ್ರಿಯಾಶೀಲ ಸಂಚಾಲಕರ ಅವಶ್ಯಕತೆ ಇದೆ. ರಾಜ್ಯ ಸಮಿತಿಯು ಈ ಪರಿಸ್ಥಿತಿಯನ್ನು ಮನಗೊಂಡು ಸೂಕ್ತ ವ್ಯಕ್ತಿಯನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

     

    ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಮಾತನಾಡಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾಮಮೂರ್ತಿ (ರಾಮು) ನೇರಳೆಘಟ್ಟ ಇವರ ನೇತೃತ್ವದಲ್ಲಿ ಸಂಘಟನೆ ಪ್ರಬಲವಾಗಿ ಬೆಳೆಯುತ್ತಿದ್ದು . ಉಳಿದ ದೇವನಹಳ್ಳಿ, ಹೊಸಕೋಟೆ ತಾಲೂಕಿನಲ್ಲಿ ಸಂಘಟನೆ ಯಾವುದೇ ರೀತಿಯಾಗಿ ಅಭಿವೃದ್ಧಿ ಹೊಂದಿಲ್ಲ ಸಂಘಟನೆ ಬಲಪಡಿಸಲು ಜಿಲ್ಲಾ ಸಂಚಾಲಕರು ಶ್ರಮಿಸಬೇಕಿದೆ. ಆದರೆ ಜಿಲ್ಲಾ ಸಂಚಾಲಕರು ಸಂಘಟನೆಯ ಬಲವರ್ಧನೆಗೆ ಯಾವುದೇ ರೀತಿಯ ಯೋಜನೆಗಳು ಅಥವಾ ಕಾರ್ಯಗಳನ್ನು ರೂಪಿಸಿರುವುದಿಲ್ಲ ಹಾಗಾಗಿ ಜಿಲ್ಲಾ ಸಂಚಾಲಕರನ್ನು ಬದಲಾವಣೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊಸಕೋಟೆ,ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಮುಖಂಡರು, ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ : ನಾಗರೆಕೆರೆ ಸೇರುತ್ತಿದ್ದ ಘನತ್ಯಾಜ್ಯಕ್ಕೆ ಬ್ರೇಕ್ : ನಗರಸಭೆ ವತಿಯಿಂದ ಘನತ್ಯಾಜ್ಯ ತಡೆಗೆ ಬಲೆಗಳ ನಿರ್ಮಾಣ*

    ದೊಡ್ಡಬಳ್ಳಾಪುರ : ತಾಲ್ಲೂಕಿನ ನಾಗರ ಕೆರೆಗೆ ರಾಜ ಕಾಲುವೆ ಹಾಗೂ ಮೋರಿಗಳ ಮುಖಾಂತರ ನಿರಂತರವಾಗಿ ಹಾಗೂ ಮಳೆ ಬಿದ್ದಾಗ ಬಂದು ಸೇರುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ಘನ ತ್ಯಾಜ್ಯಗಳನ್ನು ತಡೆಗಟ್ಟಲು ಘನ ತ್ಯಾಜ್ಯದ ತಡೆಯ ಬಲೆಗಳನ್ನು ನಿರ್ಮಿಸಲಾಗಿದೆ.

     

     

    ನಗರ ಭಾಗದ ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯ ವಸ್ತುಗಳು ಕೆರೆಯ ಸೇರಿ ಕೆರೆಯ ಜಲಮೂಲ ಸಂಪೂರ್ಣ ಹಾಳಾಗಿದ್ದು ಈ ಕುರಿತಂತೆ ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ತಡವಾದರೂ ಕೊನೆಗೆ ನಮ್ಮ ನಗರ ಸಭೆ ಸ್ಪಂದಿಸಿ ಈಗ ನಾಗರಕರೆಗೆ ಒಳಹರಿವು ಇರುವ ವಿವಿಧ ಕಾಲುವೆಗಳಿಗೆ ಘನ ತ್ಯಾಜ್ಯದ ತಡೆಯ ಬಲೆಗಳನ್ನು ನಿರ್ಮಿಸಲಾಗುತ್ತಿದೆ.ನಿರ್ಮಿಸುವುದು ಖುಷಿ ವಿಚಾರವೇ.. ಆದರೆ ಇದರ ನಿರ್ವಹಣೆ ತುಂಬಾ ಮುಖ್ಯವಾಗಿದ್ದು ನಗರಸಭೆ ಈ ಕುರಿತು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕೆಂದು ಸಮಿತಿಯ ಮುಖಂಡ ಚಿದಾನಂದಮೂರ್ತಿ ತಿಳಿಸಿದರು.

     

    ಸಾರ್ವಜನಿಕರು ಕಾಲುವೆಗಳಿಗೆ ಹಾಗೂ ಕೆರೆಗಳಿಗೆ ಕಸ ಬಿಸಾಡದಂತೆ ಸ್ವಚ್ಛತೆಯನ್ನು ಪಾಲನೆ ಮಾಡುವ ಮೂಲಕ ಜವಾಬ್ದಾರಿಯುತವಾಗಿ ಸಮಾಜದ ಸ್ವಚ್ಛತೆ ಕಾಪಾಡಬೇಕೆಂದು ನಗರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು,ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.