Blog

  • ಬಮೂಲ್ ನಿರ್ದೇಶಕರ ಸ್ಥಾನದ ಚುನಾವಣೆಗೆ ಹುಸ್ಕೂರ್ ಟಿ ಆನಂದ್ ನಾಮಪತ್ರ ಸಲ್ಲಿಕೆ

    ಮೇ 25 ರಂದು ನಡೆಯಲಿರುವ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಹುಸ್ಕೂರ್ ಟಿ ಆನಂದ್ ಶನಿವಾರ ನಾಮಪತ್ರ ಸಲ್ಲಿಸಿದರು.

     

    ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ , ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ. ವಿಜಯಕುಮಾರ್ ಸೇರಿದಂತೆ ಹಲವು ಪ್ರಮುಖರು ಸಾಥ್ ನೀಡಿದ್ದಾರೆ,

     

    ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ” ನಮ್ಮ ಜೆಡಿಎಸ್ ಪಕ್ಷದ ವರಿಷ್ಠರಾದ ಬಿ ಮುನೇಗೌಡರವರ ಆದೇಶಕ್ಕೆ ನಾನು ಕಾಯುತ್ತಿದ್ದೇನೆ, ಸ್ಥಳೀಯವಾಗಿ ಜೆಡಿಎಸ್ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾನು ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದರು , ” ಅಂತೆಯೇ ಇಂದು ಜೆಡಿಎಸ್ ವರಿಷ್ಠರ ಜೊತೆ ನಾಮಪತ್ರ ಸಲ್ಲಿಸಿರುವುದು ವಿಶೇಷ, ಸ್ಥಳೀಯವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಒಡಕು ಮೂಡಿದಿಯಾ…??? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

     

    ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವರಿಷ್ಟರು ಹಾಗೂ ಜೆಡಿಎಸ್ ಮುಖಂಡರು, ತಾಲೂಕಿನ ಹಾಲು ಉತ್ಪಾದಕ ಸಂಘದ ಪ್ರಮುಖರು ಹಾಜರಿದ್ದರು.

  • ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಫಲಿತಾಂಶ ಪ್ರಕಟ : 9 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ- ಜೆಡಿಎಸ್ ಮೈತ್ರಿ ಭರ್ಜರಿ ಗೆಲುವು

    ದೊಡ್ಡಬಳ್ಳಾಪುರ : ದೊಡ್ಡತುಮಕೂರು ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘ( ನಿ ) (ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ) ದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ 9 ಸ್ಥಾನಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಿದೆ.

     

     

    ಅಕ್ಟೋಬರ್ 26 (26-10-2024)ರಂದು ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ನೆಡೆದಿದ್ದ ಚುನಾವಣೆಯಲ್ಲಿ ಏನ್ ಡಿ ಎ ಬೆಂಬಲಿತ 9 (ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ನೂತನ ನಿರ್ದೇಶಕರನ್ನು ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ , ಮುಖಂಡರುಗಳಾದ ತಿ. ರಂಗರಾಜು, ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ , ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ. ವಿಜಯಕುಮಾರ್, ಬಿಜೆಪಿ ನಗರ ಅಧ್ಯಕ್ಷ ಕೆ ಬಿ ಮುದ್ದಪ್ಪ ಅಭಿನಂದಿಸಿದ್ದಾರೆ.

    ಚುನಾವಣೆಯಲ್ಲಿ ಪಡೆದ ಮತಗಳ ಮಾಹಿತಿ :

     

    ಪ್ರಕಾಶ್ ( 116),ಕೆ ಬಿ.ಮುನಿಕೆಂಪಣ್ಣ( 109),ಟಿ.ಜಿ. ಮಂಜುನಾಥ್ ( LIC) (122), ಕೆ.ನಾರಾಯಣ ಸ್ವಾಮಿ (129),ಪುರುಷೋತ್ತಮ್ (134),ಮುನಿನರಸಿಂಹಯ್ಯ (108),ಮುನಿರಾಜು (104),ತ್ರಿವೇಣಮ್ಮ (117),ಭಾಗ್ಯಮ್ಮ (112) ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.

     

  • ನಿಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿ ಒಟ್ಟಿಗೆ ಆಚರಿಸಿ – ಎಚ್. ಶಿವಕುಮಾರ್

    ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಹಸಿದವರಿಗೆ ಆಹಾರ ವಿತರಣೆ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಪ್ರಜಾ ವಿಮೋಚನಾ ಚಳುವಳಿ ತಾಲ್ಲೂಕು ಅಧ್ಯಕ್ಷರಾದ ಎಚ್. ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

     

    ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ 1878 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಡು ಬಡವರಿಗೆ ನಿರಾಶ್ರಿತರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷವೂ ಸಾರ್ವಜನಿಕರಿಗೆ ಸೇವೆ ಮಾಡುವ ಮೂಲಕ ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ , ಅಂತೆಯೇ ಇಂದು ವಿಶೇಷವಾಗಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ನನ್ನ ಹುಟ್ಟುಹಬ್ಬವನ್ನು ಕಡುಬಡವರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

    ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಇಂತಹ ಜನರ ಮಧ್ಯೆ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸುವುದು ಅತ್ಯಂತ ಅರ್ಥಪೂರ್ಣ ಎಂಬುದು ನನ್ನ ಭಾವನೆ, ಸಮಾಜದಲ್ಲಿ ದುಂದು ವೆಚ್ಚ ಮಾಡಿ ಹುಟ್ಟುಹಬ್ಬವನ್ನು ಶುಭ ಸಮಾರಂಭಗಳನ್ನು ಆಚರಿಸುವ ಸಮುದಾಯಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇನೆ , ತಮ್ಮ ಸಂಭ್ರಮಾಚರಣೆ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಮೂಲಕ ಆಚರಣೆಯಾಗಲಿ ಎಂದರು.

     

    ಸಮಾಜ ಸೇವಕರದ ರಫೀಕ್ ಪಾಷಾ ಮಾತನಾಡಿ ಆತ್ಮೀಯ ಗೆಳೆಯರು ಯುವ ಮುಖಂಡರಾದ ಶಿವುರವರು ತಮ್ಮ ಹುಟ್ಟುಹಬ್ಬವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ, ದೇಶ ಮುಂದುವರೆದಿದೆ ಎಂದು ಹೇಳುವ ರಾಜಕಾರಣಿಗಳು ಇಂತಹ ಸ್ಲಂ ಗಳಿಗೆ ಬಂದು ಭೇಟಿ ಮಾಡಬೇಕು, ಬಡವರ ಜೀವನ, ಕಷ್ಟ ಕುರಿತಂತೆ ಅರಿವು ಪಡೆಯಬೇಕು , ಸರ್ಕಾರದ ಯೋಜನೆಗಳು ಶ್ರೀಮಂತರ ಜೇಬು ತುಂಬಿಸುವುದು ಬಿಟ್ಟು, ಬಡವರ ಹೊಟ್ಟೆ ತುಂಬಿಸಲಿ ಎಂದರು.

    ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ರಾಜ್ಯಕಾರ್ಯಧ್ಯಕ್ಷರು ಹಾಗೂ ಪ್ರಜಾ ವಿಮೋಚನ ಚಳುವಳಿಯ ಜಿಲ್ಲಾಧ್ಯಕ್ಷ ಅಧ್ಯಕ್ಷ H ರಾಘವವೇಂದ್ರ ಮಾತನಾಡಿ ಇಂದಿನ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಶಿವಕುಮಾರ್ ಮತ್ತು ಕುಟುಂಬದವರಿಗೆ ಶುಭವಾಗಲಿ , ಇಂತಹ ಕಾರ್ಯಕ್ರಮಗಳ ಮೂಲಕ ನಿರಾಶ್ರಿತ ಕಡುಬಡವರ ಕಷ್ಟಗಳಲ್ಲಿ ನಾವು ಸ್ವಲ್ಪ ಮಟ್ಟಿಗೆ ಭಾಗಿಯಾಗುವ ಮೂಲಕ ಸ್ಪಂದಿಸಿದ್ದೇವೆ ಎಂಬುದೇ ಒಂದು ರೀತಿಯ ಸಂತಸದ ವಿಷಯ, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರ ಪ್ರದೇಶದಲ್ಲಿ ಇಂದಿಗೂ ಇಂತಹ ಕಡು ಬಡವರು ಇದ್ದಾರೆ ಎಂಬುದೇ ದುಃಖದ ಸಂಗತಿ, ಸರ್ಕಾರದ ಯೋಜನೆಗಳು ಸೂಕ್ತ ರೀತಿಯಲ್ಲಿ ದೊರೆಯಲಿ, ದಾನಿಗಳು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಲಿ ಎಂಬುದೇ ನನ್ನ ಆಶಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

     

    ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್, ವಿಜಯ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್, ಉದಯ್ ಕುಮಾರ್, ಅನ್ನ ದಾಸೋಹಿ ಮಲ್ಲೇಶ್, ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

     

     

     

  • ಬಮೂಲ್ ಚುನಾವಣೆ : ನಿರ್ದೇಶಕರ ಸ್ಥಾನದ ಚುನಾವಣೆಗೆ ಬಿ.ಸಿ. ಆನಂದ್ ಕುಮಾರ್ ನಾಮಪತ್ರ ಸಲ್ಲಿಕೆ : ಸ್ಥಳೀಯ ರೈತ ಸಂಘದಿಂದ ಸಂಪೂರ್ಣ ಬೆಂಬಲ ಘೋಷಣೆ

    ಮೇ 25 ರಂದು ನಡೆಯಲಿರುವ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನದ ಚುನಾವಣೆಗೆ ಬಿ.ಸಿ ಆನಂದ್ ಕುಮಾರ್ ಶುಕ್ರವಾರ ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೇ. 25 ರಂದು ನಡೆಯಲಿರುವ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಯಿತು, ಕಳೆದ ಐದು ವರ್ಷಗಳಲ್ಲಿ ಹಾಲು ಉತ್ಪಾದಕ ಸಂಘಗಳಿಗೆ ಹಾಗೂ ರೈತರಿಗೆ ನನ್ನ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ಇಂದಿನ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನನ್ನೊಂದಿಗೆ ಪ್ರಾಮಾಣಿಕ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿರುವುದು ವಿಶೇಷವಾಗಿದೆ, ನನ್ನ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆಗೆ ತಾಲ್ಲೂಕಿನ ಹಾಲು ಉತ್ಪಾದಕ ರೈತರು ಆಶೀರ್ವದಿಸಿ ಮತ್ತೊಮ್ಮೆ ಅವರ ಸೇವೆ ಮಾಡಲು ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ. ಇಂದಿನ ನಾಮಪತ್ರ ಸಲ್ಲಿಕೆಗೆ ನನ್ನೊಂದಿಗೆ ತಾಲ್ಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರುಗಳು,ಹಾಲು ಉತ್ಪಾದಕ ರೈತರು, ಮುಖಂಡರು, ಹಿತೈಷಿಗಳು ಆಗಮಿಸಿ ಆಶೀರ್ವಾದಿಸಿರುವುದು ಅತ್ಯಂತ ಸಂತೋಷ ತಂದಿದೆ, ಬಮೂಲ್ ಚುನಾವಣೆ ಯಾವುದೇ ಪಕ್ಷದ ಚುನಾವಣೆ ಅಲ್ಲ ಇದೊಂದು ರೈತಾಪಿ ವರ್ಗದ ಚುನಾವಣೆ ಬಮೂಲ್ ನಿರ್ದೇಶಕ ಸ್ಥಾನವು ಯಾವುದೇ ಪಕ್ಷ ಬೇದವಿಲ್ಲದೆ ರೈತರಿಗೆ ಸಹಕಾರ ನೀಡುವ ಕಾರ್ಯಮಾಡುತ್ತದೆ ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಪಕ್ಷ ವ್ಯಕ್ತಿ ಬೇಧ ಮಾಡದೆ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ , ಈ ಬಾರಿಯೂ ಕೂಡ ರೈತರು ಆಶೀರ್ವದಿಸುತ್ತಾರೆ ಎಂಬ ದೃಢ ನಂಬಿಕೆ ಇದೆ ಎಂದರು .

    ರೈತ ಸಂಘದಿಂದ ಸಂಪೂರ್ಣ ಬೆಂಬಲ ಘೋಷಣೆ:

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಸನ್ನ ಮಾತನಾಡಿ ಬಮೂಲ್ ನಿರ್ದೇಶಕ ಸ್ಥಾನದ ಅಧಿಕಾರವನ್ನು ಸದ್ಬಳಕೆ ಮಾಡುವ ಮೂಲಕ ತಾಲೂಕಿನ ರೈತರಿಗೆ ಸರ್ಕಾರದ ಯೋಜನೆಗಳನ್ನು ಸಂಪೂರ್ಣವಾಗಿ ತಲುಪಿಸಿ, ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮೂಲಕ ಇತಿಹಾಸದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕರಿಗೆ 4 ರೂ ಹೆಚ್ಚಳದ ರೈತರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಬಿ.ಸಿ. ಆನಂದ್ ಕುಮಾರ್ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ, ದೊಡ್ಡಬಳ್ಳಾಪುರ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿಗಾಗಿ ಸದಾ ದುಡಿದಿದ್ದಾರೆ, ಅವರಿಗೆ ನಮ್ಮ ರೈತ ಸಂಘದ ಸಂಪೂರ್ಣ ಬೆಂಬಲ ನೀಡುತ್ತಿದ್ದು, ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸುತ್ತೇವೆ ಎಂದರು.

     

    ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ತಾಲೂಕಿನ ಎಲ್ಲಾ ಡೈರಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು .

  • NDA ವರಿಷ್ಠರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ಬಮೂಲ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾನು ಸಿದ್ಧ – ಹುಸ್ಕೂರ್ ಆನಂದ್

    ದೊಡ್ಡಬಳ್ಳಾಪುರ : ನಾನು ಚುನಾವಣೆಗೆ ನಿಲ್ಲಬಾರದೆಂಬ ದುರುದ್ದೇಶದಿಂದ ನನ್ನ ಮೇಲೆ ಮಾಡಿದ್ದ ಕೆಲ ಕುತಂತ್ರಗಳ ವಿರುದ್ಧ ನಾನು ನ್ಯಾಯಾಂಗದ ಮೊರೆ ಹೋಗಿದ್ದು, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಗೆದ್ದಿದ್ದೇನೆ ಬಮೂಲ್ ಚುನಾವಣೆಯಲ್ಲಿ ಮತದಾನ ಮಾಡಲು ಮತ್ತು ಸ್ಪರ್ದಿಸಲು ನ್ಯಾಯಾಲಯ ಆದೇಶ ನೀಡಿದೆ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ರವರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ನಾಮಪತ್ರ ಸಲ್ಲಿಸಲು ನಾನು ಸಿದ್ಧ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ತಿಳಿಸಿದ್ದಾರೆ.

     

    ಈ ಕುರಿತು ಮಾತಾಡಿರುವ ಅವರು ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಹುದೆಂಬ ಉದ್ದೇಶದಿಂದ ಕೆಲವರು ನನ್ನ ವಿರುದ್ಧ ಕುತಂತ್ರಕ್ಕೆ ಮುಂದಾಗಿದ್ದು, ನಮ್ಮ ಹುಸ್ಕೂರು ಹಾಲು ಉತ್ಪಾದಕರ ಸಂಘವನ್ನು ಸೂಪರ್ ಸೀಡ್ ಮಾಡಲು ಮುಂದಾಗಿದ್ದರು, ಈ ಕುರಿತಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿ ಗೆದ್ದಿದ್ದೇವೆ, ನಾನು ಚುನಾವಣೆಯಲ್ಲಿ ಭಾಗವಹಿಸಬಹುದೆಂಬ ಆದೇಶವು ಬಂದಿದೆ , ಹಾಗಾಗಿ ಈ ಬಾರಿಯ ಬಮೂಲ್ ಚುನಾವಣೆಯಲ್ಲಿ ಮತದಾನ ಮಾಡಲು ಹಾಗೂ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ , ಸ್ಥಳೀಯವಾಗಿ ನಮ್ಮ ಪಕ್ಷದ ವರಿಷ್ಠರಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ರವರು ಅಭ್ಯರ್ಥಿಯನ್ನಾಗಿ ನನನ್ನು ಘೋಷಣೆ ಮಾಡಿದರೆ ನಾಮಪತ್ರ ಸಲ್ಲಿಸಲು ನಾನು ಸಿದ್ಧ ಎಂದರು.

     

    ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜುರವರನ್ನು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ತಾಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದರು

    ಕಾಂಗ್ರೆಸ್ ಪಕ್ಷವು ಈಗಾಗಲೇ ನನಗೆ ನಾಮಿನಿ ನೀಡಿದ್ದು ಸಂತಸದ ವಿಷಯವಾಗಿದೆ, ನನ್ನ ಮೇಲೆ ಭರವಸೆ ಇಟ್ಟ ಕಾಂಗ್ರೆಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ , ಬಮೂಲ್ ಚುನಾವಣೆಯಲ್ಲಿ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು ಪ್ರಸ್ತುತ ನಾನು ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಬೇಕಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೇನೆ ಎಂದರು.

  • ಬಮೂಲ್ ಚುನಾವಣೆ : ನಾಳೆ (ಮೇ.16) ಪ್ರಬಲ ಆಕಾಂಕ್ಷಿಯಾಗಿ ಅಧಿಕೃತ ನಾಮಪತ್ರ ಸಲ್ಲಿಕೆ ಮಾಡಲಿರುವ ಬಿ.ಸಿ. ಆನಂದ್ ಕುಮಾರ್

    ದೊಡ್ಡಬಳ್ಳಾಪುರ : ಮೇ 25 ರಂದು ನಡೆಯಲಿರುವ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಆಕಾಂಕ್ಷಿಯಾಗಿ ಬಿ ಸಿ ಆನಂದ್ ಕುಮಾರ್ ನಾಳೆ ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ನಡೆಸಿದ್ದು , ತಾಲೂಕಿನ ಎಲ್ಲಾ ಡೈರಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು ನಾಳೆ ಮೇ 16ರಂದು ಬೆಳಗ್ಗೆ 9 ಗಂಟೆಗೆ ದೊಡ್ಡಬಳ್ಳಾಪುರ ಶಿಬಿರ ಕಚೇರಿಯಿಂದ ಹೊರಟು ಮಧ್ಯಾಹ್ನ ಸುಮಾರು 12 ಗಂಟೆಗೆ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ, ಈ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಾಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು , ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ. ಮುನೇಗೌಡರನ್ನು ಒಳಗೊಂಡಂತೆ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು , ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ವಾದ್ದರಿಂದ ನಾಳೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಮಕ್ಷಮದಲ್ಲಿ ತಾಲೂಕಿನ ಶಾಸಕರು ಹಾಗೂ ಎನ್‌ಡಿಎ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

     

    ಮಾನ್ಯ ಸಂಸದರಾದ ಡಾ. ಕೆ ಸುಧಾಕರ್ , ತಾಲೂಕಿನ ಶಾಸಕರಾದ ಧೀರಜ್ ಮುನಿರಾಜು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ರವರ ನೇತೃತ್ವದಲ್ಲಿ ಬಮೂಲ್ ಚುನಾವಣೆಗೆ ಏನ್ ಡಿ ಎ ಅಭ್ಯರ್ಥಿ ಆಯ್ಕೆಯನ್ನು ಶೀಘ್ರವಾಗಿ ಮಾಡುವ ನಿರೀಕ್ಷೆ ಇದೆ , ನಾನು ಪ್ರಬಲ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು .

    ನಾಳೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಡೈರಿ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಸಿರಿದಂತೆ ಹಿತೈಷಿಗಳು ಭಾಗವಹಿಸಿ ಆಶೀರ್ವದಿಸುವಂತೆ ಮನವಿ ಮಾಡಿದರು.

  • ಕೊಡಿಗೇಹಳ್ಳಿ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರಾದ ಗಾಯತ್ರಿ ಮಂಜುನಾಥ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

    ದೊಡ್ಡಬಳ್ಳಾಪುರ : ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕೊಡಿಗೇಹಳ್ಳಿ ಪಂಚಾಯತಿ ಸದಸ್ಯರಾದ ಗಾಯತ್ರಿ ಮಂಜುನಾಥ್ ಸೇರ್ಪಡೆಯಾದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸಭೆಯ ನಂತರ ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಕೆ ಪಿ ಸಿ ಸಿ ಉಪಾಧ್ಯಕ್ಷ ಟಿ. ವೆಂಕಟರಮಣಯ್ಯನವರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಜೆಡಿಎಸ್ ಪಕ್ಷದ ಗಾಯತ್ರಿ ಮಂಜುನಾಥ್ ರವರನ್ನು ಸ್ವಾಗತಿಸಿದರು, ನಂತರ ಮಾತನಾಡಿದ ಅವರು ಮಹಾತ್ಮ ಗಾಂಧೀಜೀಯವರ ಕಾಲದಿಂದಲೂ ಬಡವರ ಹೇಳಿಗೆಗಾಗಿ ಸದಾ ದುಡಿಯುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಂತವನ್ನು ಒಪ್ಪಿ ಇದ್ದು ನಮ್ಮ ಪಕ್ಷಕ್ಕೆ ಗಾಯತ್ರಿ ಮಂಜುನಾಥ್ ಸೇರ್ಪಡೆಯಾಗಿದ್ದು, ಪಕ್ಷ ನಿಷ್ಠೆಯಿಂದ ಸದಾ ಸಾರ್ವಜನಿಕರ ಸೇವೆ ಸಲ್ಲಿಸುವ ಮೂಲಕ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹಸನಘಟ್ಟ ರವಿ, ಪಾಲನ ಜೋಗಹಳ್ಳಿ ಪ್ರೇಮ್ ದಾಸ್,ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್, ಕೊಡಿಗೇಹಳ್ಳಿ ಪಂಚಾಯತಿ ಸದಸ್ಯರಾದ ಅಬ್ದುಲ್ ವಾಹಿದ್, ಯಾಕೂಬ್ ಬೇಗ್, ನಾಗರತ್ನಮ್ಮ, ಮಾಜಿ ಸದಸ್ಯರಾದ ಕೃಷ್ಣ ನಾಯಕ್, ಮುಖಂಡರಾದ ಖಾಸಿಂ ಸಾಬ್ , ಜಿ.ವಿ.ಮಂಜುನಾಥ್, ಬಾಬಾ ಜಾನ್  ಇದ್ದರು.

     

  • ತೂಬಗೆರೆಯ ಎಂಟು ಹಲಸು ತಳಿಗಳಿಗೆ ಪಿಪಿಎಫ್‌ಆರ್‌ಎ ಪೇಟೆಂಟ್ : ರೈತರಿಗೆ ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ

    ದೊಡ್ಡಬಳ್ಳಾಪುರ: ಇಲ್ಲಿನ ತೂಬಗೆರೆ ಭಾಗದ ಎಂಟು ಹಲಸು ತಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ನೀಡಲಾಗಿದೆ . ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು  ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ ರೈತರಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ  ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ  ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು .

    ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿಎಫ್‌ಆರ್‌ಎ) ದಿಂದ  ತೂಬಗೆರೆ ಸುತ್ತಮುತ್ತಲಿನ ಎಂಟು ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್)  ಪ್ರಮಾಣ ಪತ್ರವನ್ನು ವಿಶ್ರಾಂತ ಕುಲಪತಿ ನಾರಾಯಣ ಗೌಡ ವಿತರಿಸಿ ಮಾತನಾಡಿದರು ಹಲಸಿನ ಹಣ್ಣಿನ ಬಗ್ಗೆ ಕೆಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಲಸಿನ ಹಣ್ಣುಗಳಲ್ಲಿರುವ ಔಷಧೀಯ ಗುಣ, ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಸಂಶೋಧನೆ ಮಾಡುತ್ತಿದೆ. ಸ್ಥಳೀಯವಾಗಿ ಹಲಸಿನ ಹಣ್ಣು  ಮೌಲ್ಯವರ್ಧನೆ, ಉತ್ಪನ್ನಗಳ ಕುರಿತ ಅರಿವಿಗೆ ಮೂಡಿಸುತ್ತಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಅಂಶಗಳಾದ, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈಗ ಪೇಟೆಂಟ್ ಪಡೆದ ರೈತರು ತಮ್ಮ ತಳಿಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸಬೇಕು ಎಂದರು.

    ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹಚ್ಚುವ ಯಂತ್ರದ ಕುರಿತು ಜಿಕೆವಿಕೆ ವಿಜ್ಞಾನಿ ಡಾ ಶಾಮಲ ಮಾಹಿತಿ ನೀಡಿದರು.

    ತೂಬಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ತೂಬಗೆರೆ ಸೇರಿದಂತೆ ತಾಲೂಕಿನಲ್ಲಿ 1 ಸಾವಿರ ಟನ್‌ ಹಲಸು ವಹಿವಾಟು ಆಗಿದೆ. ಯಾವುದೇ ರಸ್ತೆ ಪಕ್ಕ ನೋಡಿದರೂ ಹಲಸು ಕಾಣುತ್ತದೆ. ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಎಲ್ಲಾ ಸೌಲಭ್ಯ ಒಳಗೊಂಡಂತೆ ಹಲಸು ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದರು.

    ಪಿಪಿಎಫ್‌ಆರ್‌ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ ಮಾತಾನಾಡಿ, ನಮ್ಮ ಹೊಲದ ಹಲಸಿನ ಹಣ್ಣಿಗೆ ರಾಷ್ಟ್ರ ಮಟ್ಟದ ಮಾನ್ಯತೆ ನೀಡಿರುವುದು ಸಂತಸ ತಂದಿದೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶ ಸಿಗುವುದಿಲ್ಲ. ಹಣ್ಣಿನ ಮಾಲೀಕರು ಅನುಮತಿ ನೀಡಿದವರು ಮಾತ್ರ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲು ಅವಕಾಶವಿದೆ ಎಂದರು.

     

    ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಕ್ರಾಸ್ ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ರವರಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲಾಯಿತು.

     

    ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಚಿಪ್ಸ್, ನಂತಹ ಉತ್ಪನ್ನಗಳ ಪ್ರದರ್ಶನ ಸಹ‌ ನೆಡೆಯಿತು.

    ಕಾರ್ಯಕ್ರಮದಲ್ಲಿ ಜಿಕೆವಿಕೆ ವಿಜ್ಞಾನಿಗಳಾದ ಡಾ.ಹನುಮಂತರಾಯ, ಡಾ. ಬಾಬು ರೈ, ಡಾ. ಸವಿತಾ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ,  ಸದಸ್ಯ ಕೃಷ್ಣಪ್ಪ (ಕಿಟ್ಟಿ).ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ತೂಬಗೆರೆ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ಮುಖಂಡರಾದ ವೆಂಕಟೇಶ್, ಕನಕದಾಸ,  ರವಿಸಿದ್ದಪ್ಪ, ಉದಯ ಆರಾಧ್ಯ, ವಾಸು, ರಂಗಪ್ಪ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.

  • ಇಂದು ತೂಬಗೆರೆಯಲ್ಲಿ ನೆಡೆಯಲಿದೆ ಹಲಸು ಕಾರ್ಯಾಗಾರ

    ದೊಡ್ಡಬಳ್ಳಾಪುರ: ತೂಬಗೆರೆ ಹಲಸು ತನ್ನ ಬಣ್ಣ, ವಾಸನೆ ಮತ್ತು ರುಚಿಯಿಂದ ವಿಶೇಷವಾಗಿದ್ದು, ಈಗ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ಪಡೆದು ಪ್ರಸಿದ್ಧಿ ಪಡೆದಿವೆ.

     

    ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿವಿಎಫ್‌ಆರ್‌ಎ) ದಿಂದ ಇತ್ತೀಚಿಗೆ  ತೂಬಗೆರೆ ಸುತ್ತಮುತ್ತಲಿನ ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ.

     

    ಈ ನಿಟ್ಟಿನಲ್ಲಿ ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು  ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ  ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ  ಕಾರ್ಯಕ್ರಮವನ್ನು ಬುಧವಾರ ಬೆಳಿಗ್ಗೆ 10 ಗಂಟೆ ತೂಬಗೆರೆ ಗ್ರಾಮದ ಸೋತೇನಹಳ್ಳಿ ರಸ್ತೆಯಲ್ಲಿರುವ ಕೃಷ್ಣಪ್ಪ ನವರ ತೋಟದಲ್ಲಿ ಆಯೋಜಿಸಲಾಗಿದೆ.

     

    ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹೆಚ್ಚುವ ಯಂತ್ರದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.

     

    ಹಲಸು ಬೆಳೆಗಾರರು ಮತ್ತು ಆಸಕ್ತರು ಭಾಗವಹಿಸಬೇಕೆಂದು ಈ ಪ್ರಕಟಣೆಯ ಮೂಲಕ ಮನವಿ ಮಾಡಲಾಗಿದೆ.

  • CBSE ಪರೀಕ್ಷೆಯಲ್ಲೂ ಶೇಕಡ 100ರಷ್ಟು ಫಲಿತಾಂಶ ಪಡೆದ MVM ಶಾಲೆ : ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಆಡಳಿತ ಮಂಡಳಿ

    ದೊಡ್ಡಬಳ್ಳಾಪುರ: ಕಳೆದ 2017-18ನೇ ಶೈಕ್ಷಣಿಕ ವರ್ಷದಿಂದ ಎಂ.ವಿ. ಎಂ ಶಾಲೆಯು ತಾಲ್ಲೂಕಿನಲ್ಲಿ ತನ್ನ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರೆಸುತ್ತಾ 2024–25ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಗಳಿಸಿದೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ. ಶ್ರೀನಿವಾಸ್ ತಿಳಿಸಿದರು.

     

     

    ಶಾಲೆಯ ಫಲಿತಾಂಶ ಕುರಿತು ಮಾತನಾಡಿದ ಅವರು ಕಳೆದ 08 ವರ್ಷಗಳಿಂದ ಶೇ.100 ಫಲಿತಾಂಶವನ್ನು ನಮ್ಮ ಶಾಲೆಯು ಪಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯ ಪರೀಕ್ಷೆಯಲ್ಲೂ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿರುವುದು ಶ್ಲಾಘನೀಯ ಸಂಗತಿಯಾಗಿದೆ , ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಹಾಗೂ ಸದಾ ನಮ್ಮೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೋಷಕರಿಗೆ ಮತ್ತು ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

     

     

     

     

    ಉತ್ತಮ ಫಲಿತಾಂಶಕ್ಕೆ ಶಾಲೆಯ ಗುಣಮಟ್ಟದ ಶಿಕ್ಷಣವೇ ಕಾರಣ…!

     

    ಹೌದು ಪ್ರಸಕ್ತ ಶೈಕ್ಷಣಿಕ ವರ್ಷದ ಫಲಿತಾಂಶದ ವಿಶೇಷತೆ ಏನೆಂದರೆ, ಈ ವಿದ್ಯಾರ್ಥಿಗಳು ಯಾರೂ ಖಾಸಗಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಗಳಿಗೆ ಹೋಗಿಲ್ಲ ಈ ಸಾಧನೆ ಸಂಪೂರ್ಣವಾಗಿ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಸಾಧ್ಯವಾಗಿದೆ ಎಂದು ಪೋಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ

    ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಗೌರವ್ ಮಾತನಾಡಿ, ಈ ಬಾರಿಯೂ ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವುದು ಸಂತಸದ ವಿಷಯ. ಮುಖ್ಯವಾಗಿ ನಮ್ಮ ವಿದ್ಯಾರ್ಥಿಗಳು ಶಾಲೆಯ ಪಾಠ ಬೋಧನೆಗಳನ್ನು ಹೊರತುಪಡಿಸಿ ಬೇರೆಡೆ ಎಲ್ಲಿಯೂ ತರಬೇತಿ ಪಡೆದಿಲ್ಲ ನಮ್ಮ ಶಾಲೆಯಲ್ಲಿಯೇ ನಡೆಸಿದ ಕಲಿಕೆಗೆ ಪೂರಕವಾದ ವಿಶೇಷ ಚಟುವಟಿಕೆ, ವಿಶೇಷ ತರಗತಿಯಿಂದ ಮಕ್ಕಳು ಉತ್ತಮ ಫಲಿತಾಂಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ದೀಕ್ಷಿತ್ ಎಲ್ ( 9.1 CGPA)ಪ್ರಥಮ, ಗೌತಮ್ ಗೌಡ .ಆರ್ (9.08 CGPA)ದ್ವಿತೀಯ, ಸೋನಿಕ. ಟಿ ( 9.05 CGPA)ತೃತೀಯ ಸ್ಥಾನಗಳನ್ನು ಪಡೆಯುವ ಮೂಲಕ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

    ಅಲ್ಲದೇ ನಮ್ಮ ಎಂವಿಎಂ ಶಾಲೆಯಲ್ಲಿ ಉತ್ತಮ ನುರಿತ ಶಿಕ್ಷಕರಿಂದ ಬೋಧನೆ ಮಾಡುವುದರ ಜೊತೆಗೆ ಮಕ್ಕಳಲ್ಲಿ ಅಡಗಿರುವ ನಾಯಕತ್ವದ ಗುಣವನ್ನು ಗುರುತಿಸಿ ಪ್ರತಿ ಮಗುವಿಗೂ ಅವಕಾಶ ಕಲ್ಪಿಸುವುದು ವಿಶೇಷವಾಗಿದೆ. ಗುಣಮಟ್ಟದ ಶಿಕ್ಷಣ ಕೇವಲ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿಲ್ಲ ಗ್ರಾಮೀಣ ಭಾಗದಲ್ಲೂ ಕಲ್ಪಿಸಬೇಕೆಂಬ ಉದ್ದೇಶವನ್ನು ನಮ್ಮ ಸಂಸ್ಥೆಯು ಉತ್ತಮ ಫಲಿತಾಂಶ ನೀಡುವ ಮೂಲಕ ಬಲವಾಗಿ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

     

     

    ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ರಾಧಾ ಶ್ರೀನಿವಾಸ, ಪ್ರಾಂಶುಪಾಲ ಗೌರವ್ ಕೆ.ಎಸ್. ಮುಖ್ಯೊಪಾಧ್ಯಾಯರಾದ ರಾಘವೇಂದ್ರ, ನಾಗೇಶ್, ಶಿಕ್ಷಕರಾದ ಸರಸ್ವತಿ, ರೂಪ ಸೇರಿದಂತೆ ಹಲವರು ಹಾಜರಿದ್ದರು .